೧೦೦೦ ತಲೈವಂಗಿ ಅಪೂರ್ವ ಚಿಂತಾಮಣಿ(ಓದುವುದು "ಆಯಿರಂ ತಲೈವಂಗಿ ಅಪೂರ್ವ ಚಿಂತಾವಣಿ".ಅನುವಾದ: ಸಾವಿರ ಜನ್ಮತಾಳಿದ ಚಿಂತಾಮಣಿ). ಇದು ೧೯೪೭ರಲ್ಲಿ ತೆರೆ ಕಂಡ ತಮಿಳು ಭಾಷೆಯ ಸಿನಿಮಾ. ಇದು ರೋಚಕತೆ ಮತ್ತು ಸಾಹಸದ ಕತೆಯನ್ನು ಹೊಂದಿದೆ. ಇದನ್ನು ಟಿ.ಆರ್ ಸುಂದರಂ ಅವರು ನಿರ್ದೇಶಿಸಿ ನಿರ್ಮಿಸಿದ್ದರು. ಇದರ ಸಂಭಾಷಣೆಗಾರರು ಭಾರತೀದಾಸನ್. ಇದರ ಸಾಹಿತ್ಯ ಸಂಯೋಜಕರು ಜಿ. ರಾಮನಾಥನ್. ಈ ಚಿತ್ರದಲ್ಲಿ ಪಿ.ಎಸ್ ಗೋವಿಂದನ್ ಮತ್ತು ವಿ. ಎನ್. ಜಾನಕಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರ ಸಾಕಷ್ಟು ಯಶಸ್ವಿಯಾಯಿತು. ೧೦೬೦ ರಲ್ಲಿ ಈ ಚಿತ್ರವನ್ನು ಸಹಸ್ರ ಸಿರ್ಚೇದ ಅಪೂರ್ವ ಚಿಂತಾಮಣಿ ಎಂಬ ಹೆಸರಿನಲ್ಲಿ ತೆಲುಗು ಭಾಷೆಯ ಸಿನಿಮಾವಾಗಿ ಇದೇ ಸ್ಟುಡಿಯೋದಲ್ಲಿ ಪುನಃ ನಿರ್ಮಿಸಲಾಯಿತು. == ಸಂಕ್ಷಿಪ್ತ ಕತೆ == ಅಷ್ಟಮಾಸಿತಿ ಎಂಬ ಅಸಾಮಾನ್ಯ ಶಕ್ತಿಯನ್ನು ಪಡೆಯಲು ಸಾಧುವೊಬ್ಬ(ಎಂ.ಆರ್ ಸ್ವಾಮಿನಾಥನ್) ಪ್ರಯತ್ನಿಸುತ್ತಿರುತ್ತಾನೆ. ಆದರೆ ಆ ಶಕ್ತಿಯನ್ನು ಪಡೆಯಲು ಆತ ಒಂದು ಸಾವಿರ ಪುರುಷರನ್ನು ಬಲಿ ಕೊಡಬೇಕಾಗಿರುತ್ತದೆ. ಇಷ್ಟು ಜನರನ್ನು ಬಲಿ ಕೊಡುವುದು ಹೇಗೆ ಎಂದು ಬಹಳ ಯೋಚಿಸುವ ಆ ಸಾಧು ಕೊನೆಗೆ ಒಂದು ಕುಟಿಲ ಉಪಾಯವನ್ನು ಹೆಣೆಯುತ್ತಾನೆ. ಆ ಉಪಾಯದಲ್ಲಿ ಒಬ್ಬ ಸುಂದರಿಯನ್ನು(ವಿ.ಎನ್ ಜಾನಕಿ) ಪಾಲ್ಗೊಳ್ಳುವಂತೆ ಮಾಡುತ್ತಾನೆ. ತನ್ನ ಬಳಿ ಬರುವ ಯುವಕರಿಗೆ ಮೂರು ಅತೀ ಕಠಿಣ ಸವಾಲುಗಳನ್ನು ನೀಡುವಂತೆ ಅವಳಿಗೆ ಆ ಸಾಧು ಕೇಳುತ್ತಾನೆ. ಆ ಸವಾಲುಗಳಿಂದ ಆ ಯುವಕರು ಏನಾಗುತ್ತಾರೆ ? ಕೊನೆಗೂ ಸಾಧು ತನ್ನ ದುರುದ್ದೇಶದಲ್ಲಿ ಯಶಸ್ವಿಯಾಗುತ್ತಾನಾ ಎಂಬ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಕುತೂಹಲ ಕೆರಳಿಸುತ್ತಾ ಚಲನಚಿತ್ರ ಮುಂದೆ ಸಾಗುತ್ತದೆ. == ವಿವರವಾದ ಕತೆ == ಮಾಂತ್ರಿಕನೊಬ್ಬನಿಗೆ ಅಷ್ಟಮಾಸಿತಿ ಎಂಬ ಶಕ್ತಿಯನ್ನು ಪಡೆಯುವ ಆಸೆಯಿರುತ್ತದೆ. ಅದಕ್ಕಾಗಿ ತಪಸ್ಸು ಮಾಡಿದಾಗ ಅವನಿಗೆ ೧೦೦೦ ಪುರುಷರ ಬಲಿ ಕೊಟ್ಟರೆ ಆ ಸಿದ್ದಿ ಸಿಗುತ್ತದೆ ಎಂದು ತಿಳಿಯುತ್ತದೆ. ತನ್ನೊಬ್ಬನಿಂದ ಈ ಕೆಲಸ ಅಸಾಧ್ಯ ಎಂದು ತಿಳಿದ ಆತ ಉಪಾಯವೊಂದನ್ನು ಹೆಣೆಯುತ್ತಾನೆ. ರಾಜಾ ನೀತಿಕೇತುವಿನ ಮಗಳು ರಾಜಕುಮಾರಿ ಅಪೂರ್ವ ಚಿಂತಾಮಣಿ. ಅವಳಿಗೆ ಹಲವು ವಿಷಯಗಳಲ್ಲಿನ ತಿಳುವಳಿಕೆ ಮತ್ತು ಬುದ್ದಿಶಕ್ತಿಯಿಂದಾಗಿ ಅವಳಿಗೆ ಅಪೂರ್ವ ಚಿಂತಾಮಣಿ ಎಂದು ಕರೆಯುತ್ತಿರುತ್ತಾರೆ. ಜನರ ಹೊಗಳಿಕೆಯಿಂದ ಸಂತೃಪ್ತನಾದ ರಾಜ ತನ್ನ ಮಗಳಿಗೆ ಇನ್ನೂ ಹೆಚ್ಚು ಕಲಿ ಎಂದು ಪ್ರೋತ್ಸಾಹಿಸುತ್ತಿರುತ್ತಾನೆ. ಮಾಂತ್ರಿಕ ಒಳ್ಳೆಯ ಸಾಧುವಿನ ವೇಷ ಹಾಕಿ ಇವರ ಆದಿತ್ಯಪುರಿ ಸಂಸ್ಥಾನಕ್ಕೆ ಬಂದು ಚಿಂತಾಮಣಿಯ ಗುರುವಾಗುತ್ತಾನೆ. ಕಾಲಕ್ರಮೇಣ ಆತ ಆಕೆಯನ್ನು ತನ್ನ ಪ್ರಭಾವಕ್ಕೆ ಒಳಪಡಿಸಿ ತಾನು ಹೇಳಿದಂತೆ ಕೇಳುವಂತೆ ಮಾಡುತ್ತಾನೆ. ಆಕೆ ಮದುವೆಯ ವಯಸ್ಸಿಗೆ ಬಂದಾಗ ಮಾಂತ್ರಿಕ ಆಕೆ ತನಗೆ ಅನುರೂಪವಾದ ವರನನ್ನೇ ಮದುವೆಯಾಗುವುದು ಸೂಕ್ತ ಎಂದು ಹೇಳುತ್ತಾನೆ. ನಿನ್ನನ್ನು ಮದುವೆಯಾಗಲು ಬರುವ ವರರಿಗೆ ಒಂದು ಪಂದ್ಯವನ್ನು ಏರ್ಪಡಿಸಿ ಅಲ್ಲಿ ಮೂರು ವಿಚಿತ್ರವಾದ ಪ್ರಶ್ನೆಗಳನ್ನು ಕೇಳು ಎಂದು ಆತ ಸೂಚಿಸುತ್ತಾನೆ. ಸರಿಯಾದ ಉತ್ತರ ಕೊಡಲು ವಿಫಲರಾಗುವ ವರರ ತಲೆಯನ್ನು ಕಡಿಯಬೇಕು ಎಂಬುದು ನಿಯಮ. ಅವರು ಬೇರೆ ವರರಿಗೆ ಆ ಪ್ರಶ್ನೆಯನ್ನು ಹೇಳಬಾರದು ಎಂಬುದಕ್ಕೆ ತಲೆಯನ್ನು ಕಡಿಯಬೇಕು ಎಂಬುದು ಈ ಘೋರ ಕಾರ್ಯಕ್ಕೆ ಆತನ ಸಮರ್ಥನೆ. ಮಾಂತ್ರಿಕನಿಗೆ ಮಾತ್ರ ಆ ಪ್ರಶ್ನೆಗಳಿಗೆ ಉತ್ತರ ಗೊತ್ತಿರುವುದರಿಂದ ತಾನು ಉತ್ತರ ಹೇಳುವಲ್ಲಿ ವಿಫಲರಾಗುವ ೧೦೦೦ ವರರ ತಲೆಯನ್ನು ಕಡಿದು ಆ ಮೂಲಕ ತನ್ನ ಗುರಿಯನ್ನು ತಲುಪಬಹುದು ಎಂಬುದು ಮಾಂತ್ರಿಕನ ಯುಕ್ತಿಯಾಗಿರುತ್ತದೆ. ಚಿಂತಾಮಣಿ ಇದಕ್ಕೆ ಒಪ್ಪುತ್ತಾಳೆ ಮತ್ತು ತನ್ನ ತಂದೆಯನ್ನೂ ಒಪ್ಪಿಸುತ್ತಾಳೆ. ಆಕೆಯ ಸೋದರ ಸಂಬಂಧಿ ಪುರಂದರನ್ ಆಕೆಯನ್ನು ಮದುವೆಯಾಗಬೇಕು ಎಂದಿರುತ್ತಾನೆ. ಆದರೆ ಆತನೇ ಮೊದಲ ಬಲಿಯಾಗುತ್ತಾನೆ. ಇದೇ ತರಹ ಆಕೆ ಒಂಭೈನೂರ ತೊಂಭತ್ತೊಂಬತ್ತು ಜನರನ್ನು ಕೊಲ್ಲುತ್ತಾಳೆ. ಇದರಲ್ಲಿ ರಾಜಕುಮಾರ ಮಯ್ಯಾಝಗನ್ ನ ಆರು ಸೋದರರೂ ಸೇರಿರುತ್ತಾರೆ. ತನ್ನ ಆರು ಸಹೋದರರರ ಸಾವಿನ ಬಗ್ಗೆ ತಿಳಿದ ರಾಜಕುಮಾರ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಆದಿತ್ಯಪುರಿಗೆ ಬರುತ್ತಾನೆ. ಆತ ತನ್ನ ಸಹಾಯಕ ಕಾಳಿಯನ್ನೂ ಕರೆದುಕೊಂಡು ಬರುತ್ತಾನೆ. ಇವರು ಆ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರವನ್ನು ಪಡೆದುಕೊಂಡೇ ಚಿಂತಾಮಣಿಯನ್ನು ಭೇಟಿ ಮಾಡಬೇಕು ಎಂದು ನಿರ್ಧರಿಸುತ್ತಾರೆ. ಈ ಪ್ರಯತ್ನದಲ್ಲಿ ರಾಜಕುಮಾರನಿಗೆ ಚಿಂತಾಮಣಿಯ ಸ್ನೇಹಿತೆ ರಾಜಕುಮಾರಿ ಸೆಂಗಮಾಲಂ ಜೊತೆ ಪ್ರೇಮವಾಗುತ್ತದೆ. ಅವಳ ಮೂಲಕ ಆತನಿಗೆ ಪ್ರಶ್ನೆಗಳ ಬಗ್ಗೆ ತಿಳಿಯುತ್ತದೆ. ಆತ ಮಾಧಿವಧನಪುರಂ, ಸಂಭಾಗಿ ಪುರಂ ಮತ್ತು ನತಿಶೀಲ ಪುರಂ ಎಂಬ ಹಲವು ದೇಶಗಳಿಗೆ ಈ ಪ್ರಶ್ನೆಗಳ ಬಗ್ಗೆ ಉತ್ತರ ತಿಳಿಯಲು ಹೋಗುತ್ತಾನೆ. ಅಲ್ಲಿಗೆ ಹೋದ ಆತ ಆ ಪ್ರಶ್ನೆಗಳ ಬಗ್ಗೆ ಉತ್ತರ ಹೇಳಬಲ್ಲ ಪರಿಣತರನ್ನು ತನ್ನೊಂದಿಗೆ ಚಿಂತಾಮಣಿಯ ಅರಮನೆಗೆ ಕರೆತರುತ್ತಾನೆ. ಆತ ಸರಿ ಉತ್ತರ ಹೇಳಿ ಪಂದ್ಯವನ್ನು ಗೆಲ್ಲುತ್ತಾನೆ. ಅಷ್ಟೇ ಅಲ್ಲದೇ ಮಾಂತ್ರಿಕನ ಕುಠಿಲದ ಬಗ್ಗೆ ಅಲ್ಲಿದ್ದ ಎಲ್ಲರಿಗೂ ಹೇಳುತ್ತಾನೆ. ಈ ಮಾಂತ್ರಿಕನಿಂದ ತೊಂದರೆಗೊಳಗಾಗಿದ್ದ ರಾಜನೊಬ್ಬ ಆ ಮಾಂತ್ರಿಕನನ್ನು ಅಲ್ಲಿಯೇ ಕೊಲ್ಲುತ್ತಾನೆ. ರಾಜಕುಮಾರ ಚಿಂತಾಮಣಿಯನ್ನು ಮದುವೆಯಾಗಲು ಇಷ್ಟಪಟ್ಟ ಆಕೆಯ ಮತ್ತೊಬ್ಬ ಸೋದರ ಸಂಬಂಧಿಯನ್ನು ಮದುವೆಯಾಗುವಂತೆ ಆಕೆಗೆ ಸೂಚಿಸಿ ಸೆಂಗಮಾಲಂಳನ್ನು ಮದುವೆಯಾಗುತ್ತಾನೆ. == ಪಾತ್ರ ವರ್ಗ == == ಹಾಡುಗಳು == ಸಂಗೀತ ಮತ್ತು ಸಾಹಿತ್ಯವನ್ನು ಜಿ. ರಾಮನಾಥನ್ ಸಂಯೋಜಿಸಿದ್ದಾರೆ. == ಉಲ್ಲೇಖಗಳು ==